ಬೆಂಗಳೂರು ಮಳೆ ಅವಾಂತರ ಪ್ರದೇಶದಲ್ಲಿ ಪರಿಹಾರ ಕಾರ್ಯನಡೆಯುತ್ತಿದೆ- ಡಿ.ಕೆ.ಶಿವಕುಮಾರ್

Share

ಬೆಂಗಳೂರು, ಮೇ,19-ನಗರದಲ್ಲಿ ಸುರಿದಿರುವ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಬಂಧಿಸಿದಂತೆ ಕಾಳಜಿ ವಹಿಸಿದ್ದು ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು ಮಳೆ ಅವಾಂತರದ ಪ್ರದೇಶದಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಮಳೆ ಅವಾಂತರವಾಗಿದ್ದರೂ, ಸಾಧನಾ ಸಮಾವೇಶಕ್ಕಾಗಿ ಹೊಸಪೇಟೆಗೆ ತೆರಳಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ಎಕ್ಸ್ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಸಂಭವಿಸಿರುವ ಅವಾಂತರದ ಬಗ್ಗೆ ಸಂಬಂಧಿತ ಅಧಿಕಾರಗಳ ಜೊತೆ ಸಂಪರ್ಕದಲ್ಲಿದ್ದೇನೆ. ನಿಕಟ ನಿಗಾ ವಹಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಎಂದಿನಂತೆ ಬೆಂಗಳೂರು ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಸಮಸ್ಯೆ ಪರಿಹರಿಸಲು ನಿರಂತರ ಕೆಲಸ ಮಾಡುತ್ತಿದ್ದೇನೆ. ಬಿಬಿಎಂಪಿ ವಾರ್ ರೂಂ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನು ವೈಯ್ಯಕ್ತಿಕವಾಗಿ ಭೇಟಿ ನೀಡಿ ಪರಿಶೀಲಿಸಲಿದ್ದೇನೆ. ಈಗ ಉಂಟಾಗಿರುವ ಮಳೆ ಅವಾಂತರ ಹೊಸದೇನಲ್ಲ. ಈ ಸಮಸ್ಯೆಗಳು ಬಹಳ ವರ್ಷಗಳಿಂದ ಎದುರಾಗುತ್ತಿದೆ ಎಂದಿದ್ದಾರೆ.

ಎಲ್ಲಾ ಸರ್ಕಾರಗಳು, ಆಡಳಿತದ ಅವಧಿಯಲ್ಲೂ ಈ ಮಳೆ ಅವಾಂತರ ಸಂಭವಿಸಿವೆ. ನಾವು ಈಗ ಅವುಗಳನ್ನು ಪರಿಹರಿಸುವತ್ತ ಕೆಲಸ ಮಾಡುತ್ತಿದ್ದೇವೆ ಎಂಬುದು ಈಗಿನ ವ್ಯತ್ಯಾಸವಾಗಿದೆ.‌ ತಾತ್ಕಾಲಿಕ ಪರಿಹಾರವಲ್ಲ, ಬದಲಿಗೆ ದೀರ್ಘ ಕಾಲೀನ ಪರಿಹಾರದತ್ತ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ಬೆಂಗಳೂರಿಗರಿಗೆ ಹೇಳುವುದೇನೆಂದರೆ, ನಾನೂ ನಿಮ್ಮಲ್ಲಿ ಒಬ್ಬ. ನಾನು ನಿಮ್ಮ ಚಿಂತೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಹತಾಶೆಯಲ್ಲಿ ನಾನು ಭಾಗೀದಾರನಾಗಿದ್ದೇನೆ. ನಾನು ನಿಮ್ಮ ಜೊತೆಗಿದ್ದೇನೆ. ಸಮಸ್ಯೆಗಳನ್ನು ಪರಿಹರಿಸಲು ನಾನು ಬದ್ಧನಾಗಿದ್ದೇನೆ ಎಂಬ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.‌

Girl in a jacket
error: Content is protected !!